ಚಿಂಚೋಳಿ:- ತಾಲ್ಲೂಕಿನಲ್ಲಿ ಇತ್ತೀಚಿಗಷ್ಟೇ ಜರುಗಿದ ಕೋಲಿ/ಕಬ್ಬಲಿಗ ಸಮಾಜದ ಅಧ್ಯಕ್ಷರ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ರೂವಾರಿ ನೋಡಲ್ ಅಧಿಕಾರಿ ಜಯಪ್ಪ ಚಾಪಲ್ ಆಗಿದ್ದಾರೆ ಎಂದು ದೌಲಪ್ಪ ಸುಣಗಾರ ನೇರವಾಗಿ ಆರೋಪಿಸಿದ್ದಾರೆ.
ತಾಲ್ಲೂಕಿನ ಅಂಬಿಗರ ಚೌಡಯ್ಯ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ದೌಲಪ್ಪ ಸುಣಗಾರ, ಜಯಪ್ಪ ಚಾಪಲ್ ನೋಂದಣಿಯಾಗದೇ ಇರುವ ಸಂಘಕ್ಕೆ ಚುನಾವಣೆಯನ್ನು ನಡೆಸಿದ್ದಾರೆ. ಒಬ್ಬ ಅಧಿಕಾರಿಯಾಗಿ ಸಂಘವು ನೋಂದಣಿಯಾಗಿದೆಯೇ ಅಥವಾ ಇಲ್ಲವೇ ಎನ್ನುವಂತಹ ಕನಿಷ್ಠ ದಾಖಲಾತಿ ಪತ್ರಗಳನ್ನು ಪರಿಶೀಲಿಸದೇ ಬೇಜವಾಬ್ದಾರಿ ತೋರಿದ್ದಾರೆ. ಅಲ್ಲದೇ, ಕೆಲವೊಂದು ಪಟ್ಟಭದ್ರ ವ್ಯಕ್ತಿಗಳ ಕೈಗೊಂಬೆಯಾಗಿ ಚುನಾವಣೆ ನಡೆಡುವುದರ ಮೂಲಕ ಕುಲಕ್ಕೆ ಕೊಡಲಿ ಕಾವಿನಂತೆ ದ್ರೋಹ ಎಸೆಗಿದ್ದಾರೆ. ಚುನಾವಣೆಯಲ್ಲಿ ಚಲಾಯಿಸಿರುವ ಮತಗಳ ಪೈಕಿ ಸರಿ ಸುಮಾರು 40-50 ಮತಗಳು ಬೋಗಸ್ ಮತಗಳಾಗಿದ್ದು,ಈ ಕುರಿತಾಗಿ ನಾವು ಈಗಾಗಲೇ ಕಾನೂನಿನ ಮೊರೆ ಹೋಗಿದ್ದು ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ, ಈರಪ್ಪ ನಾಟಿಕಾರ ಮೋತಕಪಳ್ಳಿ,ಬಸವರಾಜ ಅಣವಾರ,ಹಣಮಂತ ಗೌರಿ,ಜಗನ್ನಾಥ ಚಂದ್ರಂಪಳ್ಳಿ,ಮಹೇಶ ಭಂಗಿ,ಶರಣು ವಾಲಿಕಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







