ಕನ್ನಡ ಸಾಮ್ರಾಟ್ ವಿಶೇಷ ವರದಿ
ಸೇಡಂ ಪ್ರಗತಿ ಪರಿಶೀಲನಾ ಸಭೆ: ಅಧಿಕಾರಿಗಳಿಗೆ ಕ್ಲಾಸ್, ಗುತ್ತಿಗೆದಾರರು ಕಪ್ಪುಪಟ್ಟಿಗೆ – ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಖಡಕ್ ಎಚ್ಚರಿಕೆ
ಸೇಡಂ: ಅಭಿವೃದ್ಧಿ ಕಾಮಗಾರಿಗಳಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಗುತ್ತಿಗೆದಾರರನ್ನು ತಕ್ಷಣವೇ ಕಪ್ಪು ಪಟ್ಟಿಗೆ (Blacklist) ಸೇರಿಸುವಂತೆ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸೇಡಂ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಕರ್ತವ್ಯ ಲೋಪ ಎಸಗುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
”ಇಲ್ಲಿ ಕತ್ತೆ ಕಾಯುತ್ತಿದ್ದೀಯಾ?”: ಅಧಿಕಾರಿಗಳಿಗೆ ಸಚಿವರ ತರಾಟೆ
ಗ್ರಾಮೀಣ ಭಾಗದ ಕುಡಿಯುವ ನೀರಿನ ಪೂರೈಕೆ ಹಾಗೂ ಜಲಜೀವನ್ ಮಿಷನ್ ಯೋಜನೆಗಳ ಪ್ರಗತಿ ಕುರಿತು ಸಚಿವರು ಮಾಹಿತಿ ಕೇಳಿದರು. ಹಂಡರಕಿ ಗ್ರಾಮದ ಕಾಮಗಾರಿಗಳ ಬಗ್ಗೆ ತಪ್ಪು ಮಾಹಿತಿ ನೀಡಿದ ಪಿಡಿಒ ವಿರುದ್ಧ ಕೆಂಡಾಮಂಡಲರಾದ ಸಚಿವರು, “ಇಲ್ಲಿ ಕತ್ತೆ ಕಾಯುತ್ತಿದ್ದೀಯಾ? ಕಾಮಗಾರಿಗಳ ಮಂಜೂರಾದ ಅಂದಾಜು ಪತ್ರಿಕೆ ಎಲ್ಲಿದೆ? ಸುಳ್ಳು ಮಾಹಿತಿ ನೀಡಿದರೆ ಅಮಾನತು ಮಾಡಲಾಗುವುದು” ಎಂದು ಕಠಿಣ ಎಚ್ಚರಿಕೆ ನೀಡಿದರು.
ಬಾಕಿ ಉಳಿದಿರುವ ಕಾಮಗಾರಿಗಳನ್ನು ಮುಂದಿನ 15 ದಿನಗಳಲ್ಲಿ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಡೆಡ್ಲೈನ್ ನೀಡಿದ ಅವರು, ತಾಲೂಕಿನಲ್ಲಿ ಯುಜಿಡಿ (UGD) ಕಾಮಗಾರಿಗಳನ್ನು ಕೇವಲ ಒಂದು ತಿಂಗಳೊಳಗೆ ಮುಗಿಸುವಂತೆ ಆದೇಶಿಸಿದರು.
ಮಕ್ಕಳ ಆರೋಗ್ಯದ ಜೊತೆ ಆಟವಾಡಬೇಡಿ: ಅಧಿಕಾರಿಗಳ ವಿರುದ್ಧ ಗರಂ
ಅಂಗನವಾಡಿ ಕಟ್ಟಡಗಳ ಸೋರುವಿಕೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಅನುರಾಧ ಪಾಟೀಲ್ ಅವರು ಸಭೆಯ ಗಮನಕ್ಕೆ ತಂದರು. ಮಳೆಯಿಂದಾಗಿ ಕಟ್ಟಡಗಳು ಸೋರುತ್ತಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದ ಸಚಿವರು, ತಕ್ಷಣವೇ ಜಿಲ್ಲಾ ಮಟ್ಟದ ಅಧಿಕಾರಿಗೆ ಫೋನ್ ಮಾಡಿ, “ಮಕ್ಕಳ ಆರೋಗ್ಯದ ಜೊತೆ ಆಟವಾಡುತ್ತಿದ್ದೀರಾ?” ಎಂದು ತರಾಟೆಗೆ ತೆಗೆದುಕೊಂಡರು ಹಾಗೂ ಅವರ ವಿರುದ್ಧ ದೂರು ದಾಖಲಿಸುವಂತೆ ಸೂಚಿಸಿದರು.
ಸ್ಥಳದಲ್ಲೇ ಬಗೆಹರಿದ ಜಾಗದ ಸಮಸ್ಯೆ
ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಜಾಗದ ಕೊರತೆ ಎದುರಿಸುತ್ತಿದ್ದ ಸೋಮಪಲ್ಲಿ ಮತ್ತು ಮಲ್ಲಾಬಾದ್ ಗ್ರಾಮಗಳ ಸಮಸ್ಯೆಯನ್ನು ಸಚಿವರು ಅತ್ಯಂತ ಚಾಕಚಕ್ಯತೆಯಿಂದ ಸ್ಥಳದಲ್ಲೇ ಬಗೆಹರಿಸಿದರು. ಗ್ರಾಮದ ಪ್ರಮುಖರಾದ ಚಂದಪ್ಪ ಹಾಗೂ ಇತರರೊಂದಿಗೆ ಮಾತನಾಡಿ, ತಕ್ಷಣವೇ ಜಾಗ ಒದಗಿಸಲು ಒಪ್ಪಿಗೆ ಪಡೆದರು.
ಅದೇ ರೀತಿ, ಕುಡಿಯುವ ನೀರಿನ ಯೋಜನೆಗೆ ಅರಣ್ಯ ಇಲಾಖೆ ಜಾಗವನ್ನು ಗುರುತಿಸಿ ಎಂಜಿನಿಯರ್ಗಳು ಎಡವಟ್ಟು ಮಾಡಿದ್ದಕ್ಕೆ, ಕನಿಷ್ಠ ಪರಿಶೀಲನೆ ನಡೆಸದೆ ಎಸ್ಟಿಮೇಟ್ ಹೇಗೆ ಮಾಡಿದಿರಿ ಎಂದು ಇಂಜಿನಿಯರ್ಗಳನ್ನು ಪ್ರಶ್ನಿಸಿದರು.
ಆರೋಗ್ಯ ವರದಿ: 6 ಡೆಂಗ್ಯೂ, 4 ಟಿಬಿ ಪ್ರಕರಣ ಪತ್ತೆ
ತಾಲೂಕಿನಲ್ಲಿ ಒಟ್ಟು 6 ಡೆಂಗ್ಯೂ ಹಾಗೂ 4 ಟಿಬಿ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜೀವ ಪಾಟೀಲ ಸಭೆಗೆ ಮಾಹಿತಿ ನೀಡಿದರು. ಮುಂಬರುವ ಪೋಲಿಯೋ ಕಾರ್ಯಕ್ರಮದ ಕುರಿತು ಸಿದ್ಧತೆಗಳ ಬಗ್ಗೆ ವಿವರಿಸಿದರು. ಇಟಕಾಲ್ ಹಾಗೂ ಕೋಲಕುಂದಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಭಾಗದಲ್ಲಿ ವೈದ್ಯರ ಕೊರತೆ ಇರುವುದನ್ನು ಸಚಿವರ ಗಮನಕ್ಕೆ ತರಲಾಯಿತು.
ರೈತರು ಹಾಗೂ ಕುರಿಗಾಹಿಗಳಿಗೆ ಶೀಘ್ರ ಪರಿಹಾರ:
ಸಭೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹಾಗೂ ರೋಗಬಾಧೆಯಿಂದ ಕುರಿಗಳ ಸಾವಿಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ಕುರಿಗಳ ಸಾವಿಗೆ ಸಂಬಂಧಿಸಿದಂತೆ ತಕ್ಷಣವೇ ಪರಿಹಾರ ಒದಗಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಮಹತ್ವದ ಸಭೆಯಲ್ಲಿ ಸಹಾಯಕ ಆಯುಕ್ತರು, ತಹಶೀಲ್ದಾರ್ ಶ್ರೀಯಾಂಕ ಧನಶ್ರೀ, ತಾಪಂ ಇಒ ಸಯ್ಯದ್ ಪಾಟೀಲ್ ಸೇರಿದಂತೆ ತಾಲೂಕು ಮಟ್ಟದ ಹಲವು ಅಧಿಕಾರಿಗಳು ಹಾಗೂ ಪಿಡಿಒಗಳು ಉಪಸ್ಥಿತರಿದ್ದರು. ಒಟ್ಟಾರೆಯಾಗಿ, ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ಈ ನಡೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದು, ಜನಸಾಮಾನ್ಯರ ಪರವಾದ ಅವರ ಕಾಳಜಿಯನ್ನು ಎತ್ತಿ ತೋರಿಸಿದೆ.






