Last Updated:
ಮಲ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳು ಬೆಚ್ಚಗಿನ ರಕ್ತದ ಪ್ರಾಣಿಗಳು ಮತ್ತು ಮನುಷ್ಯರ ಕರುಳಿನಲ್ಲಿ ಕಂಡುಬರುತ್ತವೆ. ನೀರಿನಲ್ಲಿ ಸಂಭಾವ್ಯ ಮಾಲಿನ್ಯದ ಸೂಚಕಗಳಾಗಿ ಅವುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.
ಉತ್ತರ ಪ್ರದೇಶದ (Uttar Pradesh) ಪ್ರಯಾಗ್ರಾಜ್ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ (Maha Kumbh Mel) ಕೋಟ್ಯಾಂತರ ಭಕ್ತರು ಭೇಟಿ ನೀಡಿ, ಪವಿತ್ರ ಗಂಗಾ ನದಿಯಲ್ಲಿ (Ganga River) ಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದವರ ಸಂಖ್ಯೆ ಮಂಗಳವಾರ 55 ಕೋಟಿ ದಾಟುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಇದರ ನಡುವೆಯೇ, ಕುಂಭಮೇಳ ನಡೆಯುತ್ತಿರುವ ಪ್ರಯಾಗರಾಜ್ನ ತ್ರಿವೇಣಿ ಸಂಗಮದಲ್ಲಿ ನದಿಯ ನೀರು ಅತ್ಯಂತ ಕಲುಷಿತವಾಗಿದ್ದು, ಸ್ನಾನಕ್ಕೂ ಯೋಗ್ಯವಲ್ಲ ಎಂಬ ಆಘಾತಕಾರಿ ವರದಿಯೊಂದು ಹೊರಬಿದ್ದಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ನೀರಿನ ಗುಣಮಟ್ಟ ಕುರಿತ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ(ಎನ್ಜಿಟಿ) ಸಲ್ಲಿಸಿದ್ದು, ಇದರ ಬೆನ್ನಲ್ಲೇ ನ್ಯಾಯಧಿಕರಣ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಉತ್ತರ ಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ. ಪ್ರತಿನಿತ್ಯ ಕೋಟ್ಯಾಂತರ ಭಕ್ತರು ಬಂದು ಮಿಂದೇಳುತ್ತಿರುವ, ಗಂಗಾ ನದಿಯು ಗಮನಾರ್ಹ ಮಾಲಿನ್ಯವನ್ನು ಎದುರಿಸುತ್ತಿದೆ ಎನ್ನಲಾಗಿದೆ. ಸಂಸ್ಥೆಯ ವರದಿಯು 50 ಕೋಟಿಗೂ ಹೆಚ್ಚು ಜನರು ಸ್ನಾನ ಮಾಡಿದ ಗಂಗಾನದಿ ನೀರಿನಲ್ಲಿ ‘ಫೆಕಲ್ ಕೋಲಿಫಾರ್ಮ್’ ಎಂಬ ಬ್ಯಾಕ್ಟೀರಿಯಾವನ್ನು ಪತ್ತೆ ಮಾಡಿದೆ.

ಮಲ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳು ಬೆಚ್ಚಗಿನ ರಕ್ತದ ಪ್ರಾಣಿಗಳು ಮತ್ತು ಮನುಷ್ಯರ ಕರುಳಿನಲ್ಲಿ ಕಂಡುಬರುತ್ತವೆ. ನೀರಿನಲ್ಲಿ ಸಂಭಾವ್ಯ ಮಾಲಿನ್ಯದ ಸೂಚಕಗಳಾಗಿ ಅವುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ, ಏಕೆಂದರೆ ಅವುಗಳ ಉಪಸ್ಥಿತಿಯು ನೀರಿನಲ್ಲಿ ವೈರಸ್ಗಳು, ಪರಾವಲಂಬಿಗಳು ಅಥವಾ ಇತರ ಬ್ಯಾಕ್ಟೀರಿಯಾಗಳಂತಹ ಹಾನಿಕಾರಕ ರೋಗಕಾರಕಗಳನ್ನು ಹೊಂದಿರಬಹುದು ಎಂದು ಸೂಚಿಸುತ್ತದೆ, ಅವು ಪ್ರಾಣಿಗಳು ಮತ್ತು ಮನುಷ್ಯರ ಕರುಳಿನಿಂದ ಹೊರಹಾಕಲ್ಪಡುವ ತ್ಯಾಜ್ಯ ಅಥವಾ ಮಲದಿಂದ ಹುಟ್ಟಿಕೊಳ್ಳುತ್ತವೆ.
ನೀರು ಕುಡಿಯಲು, ಈಜಲು ಅಥವಾ ಇತರ ಮನರಂಜನಾ ಚಟುವಟಿಕೆಗಳಿಗೆ ಸುರಕ್ಷಿತವಾಗಿದೆಯೇ ಎಂದು ನಿರ್ಧರಿಸಲು ನೀರಿನ ಗುಣಮಟ್ಟದ ಮೌಲ್ಯಮಾಪನಗಳಲ್ಲಿ ಮಲ ಕೋಲಿಫಾರ್ಮ್ಗಳನ್ನು ಹೆಚ್ಚಾಗಿ ಪರೀಕ್ಷಿಸಲಾಗುತ್ತದೆ. ಮಲದಲ್ಲಿನ ಕೋಲಿಫಾರ್ಮ್ ಬ್ಯಾಕ್ಟೀರಿಯಾದ ಉಪಸ್ಥಿತಿಯಿಂದ ಉಂಟಾಗುವ ಮಲ ಮಾಲಿನ್ಯವು ಗಂಭೀರ ಆರೋಗ್ಯ ಅಪಾಯಗಳನ್ನುಂಟು ಮಾಡುತ್ತದೆ. ಈ ಬ್ಯಾಕ್ಟೀರಿಯಾಗಳು ವಾಕರಿಕೆ, ವಾಂತಿ, ಅತಿಸಾರ ಮತ್ತು ಹೆಚ್ಚು ತೀವ್ರವಾದ ಸೋಂಕುಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಪರಿಣಾಮವಾಗಿ, ಸ್ನಾನ ಮಾಡುವವರಲ್ಲಿ ಹೆಚ್ಚಿನ ಜಾಗೃತಿ ಬಹಳ ಮುಖ್ಯ ಎಂದು ಸಂಶೋಧಕರು ತಿಳಿಸಿದ್ದಾರೆ.

ನದಿಯು ಮಲ ಕೋಲಿಫಾರ್ಮ್ ಬ್ಯಾಕ್ಟೀರಿಯಾದಿಂದ ತೀವ್ರವಾಗಿ ಕಲುಷಿತಗೊಂಡಿದೆ, ಮುಖ್ಯವಾಗಿ ಸಂಸ್ಕರಿಸದ ಒಳಚರಂಡಿಯಿಂದಾಗಿ ಎಂದು ಸಿಪಿಸಿಬಿ ವರದಿ ಮಾಡಿದೆ. ಮಹಾಕುಂಭ ಮೇಳದ ಸಮಯದಲ್ಲಿ, ವಿಶೇಷವಾಗಿ ಮಂಗಳಕರ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಮಲದ ಸಾಂದ್ರತೆಯು ಹೆಚ್ಚಾಗುತ್ತದೆ ಎಂದು ವರದಿ ಹೇಳಿದೆ.
”50 ಕೋಟಿ ಜನರು ಕಲುಷಿತ ನೀರಿನಲ್ಲಿ ಮೀಯುವಂತೆ ಮಾಡುವಂತೆ ಮಾಡಿದ್ದೀರಿ. ಸ್ನಾನಕ್ಕೂ ಯೋಗ್ಯವಲ್ಲದ ನೀರನ್ನು ಜನರು ಕುಡಿಯಲು ಬಳಸಬೇಕೆ?” ಎಂದಿರುವ ನ್ಯಾಯಾಲಯ, ವಿಸ್ತೃತ ವರದಿ ಸಲ್ಲಿಸದಿರುವ ಬಗ್ಗೆ ಕಿಡಿಕಾರಿದೆ. ಅಲ್ಲದೇ, ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯು ಯಾವುದೋ ಒತ್ತಡದಲ್ಲಿ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ ಎಂದು ನ್ಯಾಯಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ.
February 20, 2025 4:18 PM IST





